Image

ಅನ್ನದ ಅಗುಳಿನ ಅಳಲು

Food Travel

ಯೌವ್ವನದಿಂದ ಮುಪ್ಪಿಗೆ ತೆರಳಿದ ತೆನೆಯು

ಬಾಗಿ ರೈತನ ಪಾದಕ್ಕೆ ನಮಸ್ಕರಿಸುವ ಪರಿ:


ಕೆಸರಲಿ ಮಿಂದ ನೇಗಿಲ ಯೋಗಿಯ

ರಕ್ಷೆಯಿಲ್ಲದ ಪಾದದ ಕೆಂಪು,

ಉಳುಮೆಯ ವೇಳೆ

ಜೋಡು ಎತ್ತಿನ ಬೆನ್ನ ಮೇಲೆ

ರೈತ ಏಟಿನ ಚಾಪು,

ಬಿತ್ತನೆಯ ವೇಳೆ

ಮಳೆ ಹನಿಯ ತಂಪು,

ಕೊಯ್ಲಿನ ಸಮಯದಿ

ಮಹಿಳೆಯರ ಪಾರ್ದನದ ಇಂಪು,

ಉರಿವ ಬೆಂಕಿಗೆ ಬೆಂದ

ಭತ್ತದ ಬಣ್ಣದ ಕಂಪು,

ದಿನಸಿ ಅಂಗಡಿಯವನ ಒಪ್ಪು,

ಅಪ್ಪನ ಬೆವರ ಉಪ್ಪು,

ಅಮ್ಮನ ಬೆರಳ ಕಂಪು,

ಮಡಕೆಯ ಬಿಸಿಯ ಹೆಪ್ಪು,

ಮಸಿಯ ಕಪ್ಪು


ಎಲ್ಲವನ್ನೂ ಅನುಭವಿಸಿ, ಸುಕ್ಕಾಗಿ,

ಅನಾಥವಾಗಿ ಇಂದು

ಕಸದ ತೊಟ್ಟಿಯಲ್ಲಿ

ಅನ್ನದ ಅಗುಳೊಂದು

ಕೊರಗುತ್ತಿದೆ

ಸಿಗಲಿಲ್ಲವೆಂದು ಮಗನ ಉದರದಲ್ಲಿ

ಕೆಲಹೊತ್ತಿನ ಜಾಗ ತಂಪು.


ಅನಾಥಾಶ್ರಮದಲ್ಲಿ ಕಾದು

ಬೆನ್ನಿಗಂಟಿದ ಹೊಟ್ಟೆ ಸೇರಿ

ಹಸಿವು ನೀಗಿದರೆ

ಕೊಂಚವಾದರೂ ಕಡಿಮೆಯಾಗುತ್ತಿತ್ತೇನೋ

ಅಜ್ಜ ಅಜ್ಜಿಯ ಮುಪ್ಪು!


- ಪ್ರಮಿಳ ಫ್ಲಾವಿಯ, ಕಾರ್ಕಳ.

Categories: Food, Travel Tags: #manila, #asia

1 Comments

  • Image placeholder

    Alphonse Mendonsa

    Mar 26, 2021 20:22:37

    Nice to read Pramila s poem in kannada narrating the hardships faced by farmers sacrifing their lives to feed.. Pramila has mastered to write both in konkani n kannada.. Hats off to her. Keep writing.

    Reply

Leave a comment